ಶ್ರಿಶನೈಶ್ಚರ ಪೀಡಾ ಪರಿಹಾರೋಪಾಯಗಳು

ಅವಶ್ಯಮೇವ ಭೋಕ್ತವ್ಯಂ ಕೃತಂ ಕರ್ಮ ಶುಭಾಶುಭಂ |
ನಾಭುಕ್ತಂ ಕ್ಷೀಯತೇ ಕರ್ಮ ಕಲ್ಪಕೋಟಿಶತೈರಪಿ || – ಗರುಡಪುರಾಣ
ಮಾಡಿದ ಒಳ್ಳೆಯ ಅಥವಾ ಕೆಟ್ಟ ಕರ್ಮಗಳನ್ನು ಖಂಡಿತ ಅನುಭವಿಸಲೇಬೇಕು. ಎಷ್ಟೇ ಕಾಲ ಕಳೆದರೂ ಅನುಭವಿಸದೆ ಕರ್ಮ ಕಳೆಯುವುದಿಲ್ಲ.

ಇಂಥಹ ಕರ್ಮಗಳನ್ನು ತಿಳಿದುಕೊಳ್ಳಲು ಜ್ಯೋತಿಷ್ಯವೆಂಬ ದಿವ್ಯವಾದ ವಿದ್ಯೆಯನ್ನು ಪ್ರಾಚೀನರು ನಮಗೆ ದಯಪಾಲಿಸಿದ್ದಾರೆ. ವರಾಹಮಿಹಿರಾಚಾರ್ಯರು ಈ ಕುರಿತು “ಕರ್ಮಾರ್ಜಿತಂ ಪೂರ್ವಭವೇಸದಾದಿ ಯತ್ತಸ್ಯಪಂಕ್ತಿಂ ಸಮಭಿವ್ಯನಕ್ತಿ” ಪೂರ್ವಜನ್ಮದಲ್ಲಿ ಸಂಚಿತ ಶುಭಾಶುಭ ಕರ್ಮಫಲದ ಅನುಭವಕಾಲವನ್ನು ಈ ಶಾಸ್ತ್ರವು ಸೂಚಿಸುತ್ತದೆ ಎಂದು ಹೇಳಿದ್ದಾರೆ.
ಗ್ರಹ್ಣಂತೀತಿ ಗ್ರಹಾಃ ಸರ್ವೇ ಗ್ರಹಾ ಪೀಡಾಕರಾಃ ಸ್ಮೃತಾಃ |
(ಇನ್ನೋಬ್ಬರನ್ನು) ಹಿಡಿದುಕೊಳ್ಳುತ್ತವೆ ಎಂಬರ್ಥದಲ್ಲಿ ಗ್ರಹ ಎಂದು ಕರೆಯುತ್ತಾರೆ. ಗ್ರಹಗಳು ಪೀಡೆಯನ್ನು ಮಾಡುತ್ತವೆ.
ಛಾಯಾಸೂನುಶ್ಚ ದುಃಖದಃ (ಪರಾಶರಹೋರಾ) – ಶನಿದೇವನು ದುಃಖವನ್ನು ಉಂಟುಮಾಡುತ್ತಾನೆ (ಸೂಚಿಸುತ್ತಾನೆ).

ಇಂಥಹ ಗ್ರಹಗಳ ಪೀಡಾಪರಿಹಾರಕ್ಕಾಗಿ ಶಾಸ್ತ್ರಗಳು ಅನೇಕ ವಿಧಿ-ನಿರ್ದೇಶಗಳನ್ನು ಸೂಚಿಸುತ್ತವೆ.

ಯಥೋಕ್ತಮೌಷಧಿಸ್ನಾನಂ ಗ್ರಹವಿಪ್ರಾರ್ಚನಂ ತಥಾ |
ಗ್ರಹಾನುದ್ದಿಷ್ಯ ಹೋಮೋ ವಾ ತ್ರಿಧಾಶಾಂತಿರ್ಬುಧೈಃ ಸ್ಮೃತಾ ||
ವಿಶಿಷ್ಟ ಔಷಧಿಗಳಿಂದ ಸ್ನಾನ, ಬ್ರಾಹ್ಮಣರ ಸೇವೆ (ದಾನಾದಿಗಳಿಂದ), ಗ್ರಹಗಳ ಉದ್ದಿಷ್ಟ ಮಾಡುವ ಹೋಮ-ಹವನಗಳು – ಇವು ಗ್ರಹಗಳ ಶಾಂತಿಕರ್ಮಗಳು.
ಇವುಗಳಲ್ಲದೆ ಪಾರಾಯಣ, ಜಪಾದಿಗಳಿಂದಲೂ ಸಹ ಪರಿಹಾರ ಸಾಧ್ಯ. ಶ್ರದ್ಧೆ ಮತ್ತು ಭಕ್ತಿಗಳಿಂದ ಮಾಡಿದ ಸಮಸ್ತ ಉಪಾಯಗಳು ಶೀಘ್ರ ಫಲಪ್ರದಗಳಾಗಿವೆ.

ಶನಿಕಾಟ, ಸಾಡೇಸಾತಿ, ಅಷ್ಟಮ ಪಂಚಮ ಶನಿ ಪೀಡೆಗಳಿಗೆ ಪರಿಹಾರವಾಗಿ ಶಾಸ್ತ್ರಗಳು ಅನೇಕ ಉಪಾಯಗಳನ್ನು ಹೇಳಿವೆ, ಕೆಲವು ಶೀಘ್ರಫಲಪ್ರದ ಉಪಾಯಗಳನ್ನು ಇಲ್ಲಿ ಕೊಡಲಿದ್ದೇನೆ, ಅತಿರಿಕ್ತ ವಿಶೇಷಗಳನ್ನು ಹಿರಿಯರಿಂದ, ಪಂಡಿತರಿಂದ ತಿಳಿದುಕೊಳ್ಳಬೇಕು.

(೧) ಶನಿ ಪ್ರತಿಮಾ ದಾನ – ಇದು ವಿಶೇಷ ಉಪಾಯವಾಗಿದ್ದು ಇದರ ಹೆಚ್ಚಿನ ಮಾಹಿತಿಗಳನ್ನು ಪಂಡಿತರಿಂದ ತಿಳಿದುಕೊಳ್ಳಬೇಕು.

(೨) ದಾನಗಳು -
ಪ್ರತಿ ಶನಿವಾರ ಶನೈಶ್ಚರ ಪ್ರೀತ್ಯರ್ಥ ಉಪವಾಸ ಮಾಡಬೇಕು. ಆಂಜನೇಯ ಮತ್ತು ಶನೈಶ್ಚರರ ದರ್ಶನವನ್ನು ಪ್ರಾತಃ ಕಾಲದಲ್ಲಿ ಮಾಡಬೇಕು. ಈ ಕೆಳಗೆ ಹೇಳಿರುವ ದಾನದ ವಸ್ತುಗಳಲ್ಲಿ ಎಲ್ಲವನ್ನು ಅಥವಾ ಶಕ್ಯವಾದದನ್ನು ಶಕ್ಯವಿದ್ದಷ್ಟು ಶನಿವಾರದಂದು ದಾನಮಾಡಬೇಕು.
ದಾನದ ವಸ್ತುಗಳು – ಕಬ್ಬಿಣದ ಪಾತ್ರೆ, ಎಳ್ಳಿನ ಎಣ್ಣೆ, ಕಪ್ಪು ಬಟ್ಟೆ, ನೀಲಮಣಿ, ಉದ್ದು, ಎಳ್ಳು, ನೀಲಿ ಬಣ್ಣದ ಹೂವುಗಳು, ದೀಪದಾನ ಇವುಗಳನ್ನು ದಕ್ಷಿಣಾಸಹಿತ ಯೋಗ್ಯ ವಿಪ್ರನಿಗೆ ದಾನ ಮಾಡಬೇಕು, ಈ ದಾನಗಳು ಹೆಚ್ಚೆಚ್ಚು ಮಾಡಿದಷ್ಟು ಫಲಪ್ರದ. ಧಾನ್ಯಗಳನ್ನು ಪಾತ್ರಸಹಿತ ದಾನಮಾಡಬೇಕು.

(೩) ಅಶ್ವತ್ಥ ವೃಕ್ಷ ಪ್ರದಕ್ಷಿಣಾ-ನಮಸ್ಕಾರ
ಪ್ರತಿದಿನ ಅಥವಾ ಕನಿಷ್ಟ ಪಕ್ಷ ಶನಿವಾರದಂದು ಪ್ರಾತಃ ಕಾಲದಲ್ಲಿ ಅಶ್ವತ್ಥವೃಕ್ಷದ ಪ್ರದಕ್ಷಿಣಾ ನಮಸ್ಕಾರಗಳನ್ನು ಮಾಡಬೇಕು. ಇದು ಅತೀಫಲಪ್ರದವಾದ ಉಪಾಯ.
ಮೂಲತೋ ಬ್ರಹ್ಮರೂಪಾಯ ಮಧ್ಯತೋ ವಿಷ್ಣುರೂಪಿಣೇ |
ಅಗ್ರತಃ ಶಿವರೂಪಾಯ ವೃಕ್ಷರಾಜಾಯ ತೇ ನಮಃ ||  
ಈ ಸ್ತೋತ್ರವನ್ನು ಅನ್ನುತ್ತಾ ಅಶ್ವತ್ಥಪ್ರದಕ್ಷಿಣಾ ನಮಸ್ಕಾರಗಳನ್ನು ಮಾಡಿ ಶನಿಸ್ತೋತ್ರಾದಿಗಳನ್ನು ಅನ್ನಬೇಕು.

(೪) ಶಮೀ ವೃಕ್ಷದ ಪ್ರದಕ್ಷಿಣಾ ನಮಸ್ಕಾರ
ಶಮೀವೃಕ್ಷವು ಶನಿದೇವನ ವೃಕ್ಷವಾಗಿದೆ, ಮೇಲೆ ಹೇಳಿರುವಂತೆ ನಿತ್ಯ ಶಮೀವೃಕ್ಷದ ಪ್ರದಕ್ಷಿಣಾ ನಮಸ್ಕಾರಾದಿಗಳಿಂದ ಶನಿಬಾಧೆ ನಿವಾರಣೆಯಾಗುತ್ತದೆ.
ಪ್ರದಕ್ಷಿಣಾ-ನಮಸ್ಕಾರ ಸ್ತೋತ್ರ
ಶಮೀ ಶಮಯತೇ ಪಾಪಂ ಶಮೀ ಶತ್ರು ವಿನಾಶನೀ |
ಅರ್ಜುನಸ್ಯ ಧನುರ್ಧಾರೀ ರಾಮಸ್ಯ ಪ್ರಿಯದರ್ಶಿನಿ ||

(೫) ಜಪ – ಶನೈಶ್ಚರನ ಜಪಸಂಖ್ಯೆಯು 23000. ಈ ಕೆಳಕಂಡ ಮಂತ್ರಗಳನ್ನು ಸ್ವತಃ ಅಥವಾ ಬ್ರಾಹ್ಮಣ, ಪುರೋಹಿತರಿಂದ ಮಾಡಿಸಿ ಶನಿಶಾಂತಿಯನ್ನು ಮಾಡಿಸಬೇಕು.
ವೇದೋಕ್ತ ಮಂತ್ರ -
ಓಂ ಶಮಗ್ನಿರಗ್ನಿಭಿಃ ಕರಚ್ಛನ್ನಸ್ತಪತುಸೂರ್ಯಃ ||
ತಂತ್ರೋಕ್ತ ಮಂತ್ರ -
ಓಂ ಶಂ ಶನೈಶ್ಚರಾಯ ನಮಃ ||
ಈ ಮೇಲ್ಕಂಡ ಮಂತ್ರಗಳಿಗೆ ಶುಚಿತ್ವಾಧಿ ವಿಧಾನಗಳಿದ್ದು ದಕ್ಷತೆಯ ಅವಶ್ಯಕತೆ ಇರುತ್ತದೆ.

ಪುರಾಣೋಕ್ತ (ಕಲ್ಪೋಕ್ತ) ಮಂತ್ರಗಳು -
(೧) ನೀಲಾಂಜನಸಮಾಭಾಸಂ ರವಿಪುತ್ರಂ ಯಮಾಗ್ರಜಂ |
       ಛಾಯಾಮಾರ್ತಾಂಡಸಂಭೂತಂ ತಂ ನಮಾಮಿ ಶನೈಶ್ಚರಮ್ ||
(೨) ಸೂರ್ಯಪುತ್ರೋ ದೀರ್ಘದೇಹೋ ವಿಶಾಲಾಕ್ಷಃ ಶಿವಪ್ರಿಯಃ |
       ಮಂದಚಾರಃ ಪ್ರಸನ್ನಾತ್ಮಾ ಪೀಡಾಂ ಹರತು ಮೇ ಶನಿಃ ||
ಈ ಮೇಲ್ಕಂಡ ಪುರಾಣೋಕ್ತ ಮಂತ್ರಗಳನ್ನು ಪ್ರತಿನಿತ್ಯ ಪ್ರಾತಃಕಾಲದಲ್ಲಿ ಶುಚಿರ್ಭೂತರಾಗಿ 10 ಅಥವಾ 108 ಬಾರಿ ಪಾರಾಯಣ ಮಾಡುವುದರಿಂದ ಪೀಡಾ ಪರಿಹಾರವಾಗುತ್ತದೆ.

(೬) ಸ್ತೋತ್ರ – ಪಾರಾಯಣ
- ವಿಷ್ಣುಸಹಸ್ರನಾಮ ದಿವ್ಯ ಸ್ತೋತ್ರವಾಗಿದ್ದು ಸಮಸ್ತ ಗ್ರಹದೋಷ ಪರಿಹಾರಕವಾಗಿದೆ, ನಿತ್ಯ ಪಾರಾಯಣದಿಂದ ಸರ್ವಸಿದ್ಧಿಯಾಗುತ್ತದೆ.
- ಶನೈಶ್ಚರವಿರಚಿತ ಶ್ರೀಲಕ್ಷ್ಮೀನರಸಿಂಹ ದೇವರ ಸ್ತೋತ್ರವು ಶನಿಕಾಟದ ಪರಿಹಾರಕ್ಕೆ ಅತ್ಯಂತ ಫಲಪ್ರದವಾದ ಸ್ತೋತ್ರವಾಗಿದೆ. ಇದರ ನಿತ್ಯಪಾರಾಯಣದಿಂದ ಅತಿಶೀಘ್ರ ಫಲವುಂಟಾಗುತ್ತದೆ.
- ಆಂಜನೇಯ ಸ್ತೋತ್ರ.
- ಶಿವಮಹಿಮ್ನ ಸ್ತೋತ್ರ.
- ಪಿಪ್ಪಲಾದ ಕೃತಂ ಶ್ರೀಶನಿ ಸ್ತೋತ್ರಮ್ (ಸ್ಕಂದ ಪುರಾಣೋಕ್ತ)
- ಶ್ರೀಬ್ರಹ್ಮಾಂಡಪುರಾಣೋಕ್ತಂ ಶ್ರೀಶನಿಕವಚಮ್ (ಶ್ರೀಶನಿವಜ್ರಪಂಜರ ಸ್ತೋತ್ರಮ್)
- ಶ್ರೀಶನೈಶ್ಚರಸ್ತೋತ್ರಮ್ (ದಶರಥಕೃತ)
ಈ ಸ್ತೋತ್ರಗಳನ್ನು ಪ್ರತಿನಿತ್ಯ ಪ್ರಾತಃಕಾಲದಲ್ಲಿ ಶುಚಿರ್ಭೂತರಾಗಿ ಶ್ರೀಶನಿದೇವರ ಸನ್ನಿಧಿಯಲ್ಲಿ, ಆಂಜನೇಯನ ಸನ್ನಿಧಿಯಲ್ಲಿ, ಅಶ್ವತ್ಥ-ಶಮೀ ವೃಕ್ಷಗಳ ಸನ್ನಿಧಿಯಲ್ಲಿ ಪಾರಾಯಣಮಾಡುವುದು ಅತ್ಯಂತ ಶ್ರೇಯಸ್ಕರ. ಅನುಕೂಲವಿಲ್ಲದವರು ನಿತ್ಯ ಮನೆಯಲ್ಲಿ ಮತ್ತು ಶನಿವಾರ ಮತ್ತು ರವಿವಾರಗಳಂದು ಈ ಸ್ತೋತ್ರಗಳನ್ನು ದೇವಸ್ಥಾನಗಳಲ್ಲಿ ಪಾರಾಯಣ ಮಾಡಬಹುದು.

(೬) ದೇವತಾ ಸೇವೆ – ಉಪವಾಸ
ಪ್ರತಿ ಶನಿವಾರದಂದು
- ಶ್ರೀವೆಂಕಟರಮಣದೇವರ ದರ್ಶನ ಸೇವೆ.
- ಹನುಮಂತದೇವರ ಭಕ್ತರಿಗೆ ಶನಿದೇವ ಅಭಯಪ್ರದನಾಗಿದ್ದಾನೆ. ಶನಿವಾರದಂದು ಹನುಮಂತನ ದೇವಸ್ಥಾನದಲ್ಲಿ ತೈಲಸಮರ್ಪಣೆ ಮಾಡಬೇಕು.
ಪ್ರತಿ ಶನಿವಾರ ಸಂಪೂರ್ಣ ಉಪವಾಸ ಅಥವಾ ಒಪ್ಪತ್ತು ಉಪವಾಸವನ್ನು ಶನಿದೇವರ ಪ್ರೀತ್ಯರ್ಥ ಮಾಡಬೇಕು.

(೭) ಶಾಂತಿ ಹೋಮ
ಶ್ರೀಶನೈಶ್ಚರ ಶಾಂತಿಹೋಮವನ್ನು ಮಾಡಿಸುವುದು.

(೮) ಪ್ರತಿ ಶನಿವಾರದಂದು ಎಣ್ಣೆಸ್ನಾನವನ್ನು ಮಾಡುವುದು. ತೀರ್ಥಕ್ಷೇತ್ರಸ್ನಾನ ಪುಣ್ಯಕರ.

ಇವಲ್ಲದೆ ಇನ್ನೂ ಅನೇಕ ವಿಶಿಷ್ಟ ಉಪಾಯಗಳು ಇರುತ್ತವೆ. ಮುಂದಿನ ಲೇಖನಗಳಲ್ಲಿ ಇವುಗಳನ್ನು ಸಾದರಪಡಿಸುತ್ತೇನೆ. ಮೇಲೆ ಹೇಳಿದ ಎಲ್ಲ ಉಪಾಯಗಳು ಸರ್ವಾನುಕೂಲಗಳಾಗಿವೆ, ಆದ್ದರಿಂದ ಸರ್ವರೂ ಇವುಗಳ ಉಪಯೋಗವನ್ನು ಪಡೆದುಕೊಳ್ಳಬೇಕಾಗಿ ವಿನಂತಿ.

This entry was posted in ಜ್ಯೋತಿಷ, ಶಾಂತಿ-ಪರಿಹಾರೋಪಾಯ, Uncategorized and tagged , , , , , , , , , . Bookmark the permalink.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Connecting to %s